ಚಾಗಿ ಹಾಡು – Chaagi Haadu Kannada

ಚಾಗಿ ಹಾಡು – Chaagi Haadu Kannada

ವಿವೇಕಾನಂದರ ಚಾಗಿ ಹಾಡು

ವಿವೇಕಾನಂದರ ಸನ್ಯಾಸಿ ಗೀತೆ 

ಏಳು, ಮೇಲೇಳೇಳು ಸಾಧುವೆ, ಹಾಡು ಚಾಗಿಯ ಹಾಡನು;

ಹಾಡಿನಿಂದೆಚ್ಚರಿಸು ಮಲಗಿಹ ನಮ್ಮ ಈ ತಾಯ್ನಾಡನು!  ||ಪ||

ದೂರದಡವಿಯೊಳೆಲ್ಲಿ ಲೌಕಿಕ ವಿಷಯ ವಾಸನೆ ಮುಟ್ಟದೋ,
ಎಲ್ಲಿ ಗಿರಿ ಗುಹೆ ಕಂದರದ ಬಳಿ ಜಗದ ಗಲಿಬಿಲಿ ತಟ್ಟದೋ,
ಎಲ್ಲಿ ಕಾಮವು ಸುಳಿಯದೋ – ಮೇಣ್
ಎಲ್ಲಿ ಜೀವವು ತಿಳಿಯದೋ
ಕೀರ್ತಿ ಕಾಂಚನವೆಂಬುವಾಸೆಗಳಿಂದ ಜನಿಸುವ ಭ್ರಾಂತಿಯ,
ಎಲ್ಲಿ ಆತ್ಮವು ಪಡೆದು ನಲಿವುದೋ ನಿಚ್ಚವಾಗಿಹ ಶಾಂತಿಯ,
ನನ್ನಿವರಿವಾನಂದವಾಹಿನಿಯೆಲ್ಲಿ ಸಂತತ ಹರಿವುದೋ,
ಎಲ್ಲಿ ಎಡೆಬಿಡದಿರದ ತೃಪ್ತಿಯ ಝರಿ ನಿರಂತರ ಸುರಿವುದೋ
ಅಲ್ಲಿ ಮೂಡಿದ ಹಾಡನುಲಿಯೈ, ವೀರ ಸಂನ್ಯಾಸಿ
ಓಂ! ತತ್! ಸತ್! ಓಂ! ||೧||

ಕುಟ್ಟಿ ಪುಡಿ ಪುಡಿ ಮಾಡು ಮಾಯೆಯು ಕಟ್ಟಿಬಿಗಿದಿಹ ಹಗ್ಗವ;
ಕಿತ್ತು ಬಿಸುಡೈ ಹೊಳೆವ ಹೊನ್ನಿನ ಹೆಣ್ಣು ಮಣ್ಣಿನ ಕಗ್ಗವ!
ಮುದ್ದಿಸಲಿ ಪೀಡಿಸಲಿ ದಾಸನು ದಾಸನೆಂಬುದೆ ಸತ್ಯವು;
ಕಬ್ಬಿಣವೋ? ಕಾಂಚನವೊ? ಕಟ್ಟಿದ ಕಣ್ಣಿ ಕಣ್ಣಿಯೆ ನಿತ್ಯವು.
ಪಾಪಪುಣ್ಯಗಳೆಂಬುವು,-
ಮಾತ್ಸರ್ಯ ಪ್ರೇಮಗಳೆಂಬುವು
ದ್ವಂದ್ವ ರಾಜ್ಯದ ಧೂರ್ತಚೋರರು! ಬಿಟ್ಟು ಕಳೆ,
ಕಳೆಯವರನು!
ಮೋಹಗೊಳಿಪರು, ಬಿಗಿವರಿರಿವರು; ಎಚ್ಚರಿಕೆಯೆಂದವರನು
ತಳ್ಳು ದೂರಕೆ ಓ ವಿರಕ್ತನೆ! ಹಾಡು ಚಾಗಿಯ ಹಾಡನು!
ಹಾಡಿನಿಂದೆಚ್ಚರಿಸು ಮಲಗಿಹ ನಮ್ಮ ಈ ತಾಯ್ನಾಡನು!
ಹಾಡು ಮುಕ್ತಿಯ ಗಾನವನು, ಓ ವೀರ ಸಂನ್ಯಾಸಿ-
ಓಂ! ತತ್! ಸತ್! ಓಂ! ||೨||

ಕತ್ತಲಳಿಯಲಿ; ಮಬ್ಬುಕವಿಸುವ ಭವದ ತೃಷ್ಣೆಯು ಬತ್ತಲಿ;
ಬಾಳ ಮೋಹವು ಮರುಮರೀಚಿಕೆ; ಮಾಯೆ ಕೆತ್ತಿದ ಪುತ್ತಳಿ;
ಜನನದೆಡೆಯಿಂ ಮರಣದೆಡೆಗಾಗೆಳೆವುದೆಮ್ಮನು ದೇಹವು!
ಜನ್ಮ ಜನ್ಮದಿ ಮರಳಿ ಮರಳುವುದೆಮ್ಮ
ಬಿಗಿಯಲು ಮೋಹವು!
ತನ್ನ ಜಯಿಸಿದ ಶಕ್ತನು-
ಅವನೆಲ್ಲ ಜಯಿಸಿದ ಮುಕ್ತನು!
ಎಂಬುದನು ತಿಳಿ; ಹಿಂಜರಿಯದಿರು.
ಸನ್ಯಾಸಿಯೇ, ನಡೆಮುಂದಕೆ.
ಗುರಿಯು ದೊರಕುವವರೆಗೆ ನಡೆ, ನಡೆ;
ನೋಡದಿರು ನೀ ಹಿಂದಕೆ.
ಏಳು ಮೇಲೇಳೇಳು, ಸಾಧುವೆ, ಹಾಡು ಚಾಗಿಯ ಹಾಡನು!
ಹಾಡಿನಿಂದೆಚ್ಚರಿಸು ಮಲಗಿಹ ನಮ್ಮ ಈ ತಾಯ್ನಾಡನು
ಹಾಡು ಸಿದ್ದನೆ, ಓ ಪ್ರಬುದ್ಧನೆ , ಹಾಡು ಸಂನ್ಯಾಸಿ-
ಓಂ! ತತ್! ಸತ್! ಓಂ!   ||೩||

“ಬೆಳೆಯ ಕೊಯ್ವನು ಬಿತ್ತಿದಾತನು;
ಪಾಪ ಪಾಪಕೆ ಕಾರಣ;
ವೃಕ್ಷಕಾರ್ಯಕೆ ಬೀಜಕಾರಣ; ಪುಣ್ಯ, ಪುಣ್ಯಕೆ ಕಾರಣ;
ಹುಟ್ಟಿ ಮೈವಡೆದಾತ್ಮ ಬಾಳಿನ ಬಲೆಯ ತಪ್ಪದೆ ಹೊರುವುದು;
ಕಟ್ಟು ಮೀರಿಹನಾವನಿರುವನು? ಕಟ್ಟು ಕಟ್ಟನೆ ಹೆರುವುದು!”
ಎಂದು ಪಂಡಿತರೆಂಬರು-ಮೇಣ್
ತತ್ವದರ್ಶಿಗಳೆಂಬರು!
ಆದೊಡೇನಂತಾತ್ಮವೆಂಬುದು ನಾಮರೂಪತೀತವು;
ಮುಕ್ತಿಬಂಧಗಳಿಲ್ಲದಾತ್ಮವು ಸರ್ವನಿಯಮಾತೀತವು!
ತತ್ವಮಸಿಯೆಂದರಿತು, ಸಾಧುವೆ, ಹಾಡು ಚಾಗಿಯ ಹಾಡನು!
ಹಾಡಿನಿಂದೆಚ್ಚರಿಸು ಮಲಗಿಹ ನಮ್ಮ ಈ ತಾಯ್ನಾಡನು!
ಸಾರು ಸಿದ್ಧನೆ, ವಿಶ್ವವರಿಯಲಿ! ಹಾಡು ಸಂನ್ಯಾಸಿ
ಓಂ! ತತ್! ಸತ್! ಓಂ!   ||೪||

ತಂದೆ ತಾಯಿಯು ಸತಿಯು ಮಕ್ಕಳು
ಗೆಳೆಯರೆಂಬುವರರಿಯರು
ಕನಸು ಕಾಣುತಲವರು ಸೊನ್ನೆಯೆ ಸರ್ವವೆನ್ನುತ ಮೆರೆವರು.
ಲಿಂಗವರಿಯದ ಅತ್ಮವಾರಿಗೆ ಮಗುವು? ಆರಿಗೆ ತಾತನು?
ಆರ ಮಿತ್ರನು ? ಆರ ಶತ್ರುವು? ಒಂದೆಯಾಗಿರುವಾತನು!
ಆತ್ಮವೆಲ್ಲಿಯು ಇರುವುದು;- ಮೇಣ್
ಆತ್ಮವೊಂದಾಗಿರುವುದು.
ಭೇದವೆಂಬುವ ತೋರಿಕೆಯು ನಮ್ಮಾತ್ಮನಾಶಕೆ ಹೇತುವು.
ಭೇದವನು ತೊರೆದೊಂದೆಯೆಂಬುದನರಿಯೆ ಮುಕ್ತಿಗೆ ಸೇತುವು.
ಧೈರ್ಯದಿಂದಿದನೆಲ್ಲರಾಲಿಸೆ ಹಾಡು ಚಾಗಿಯ ಹಾಡನು!
ಹಾಡಿನಿಂದೆಚ್ಚರಿಸು ಮಲಗಿಹ ನಮ್ಮ ಈ ತಾಯ್ನಾಡನು!
ಸಾರು, ಜೀವನ್ಮುಕ್ತ! ಸಾರೈ ಧೀರ ಸಂನ್ಯಾಸಿ-
ಓಂ! ತತ್! ಸತ್! ಓಂ!  ||೫||

ಇರುವುದೊಂದೇ! ನಿತ್ಯಮುಕ್ತನು, ಸರ್ವಜ್ಞಾನಿಯು ಆತ್ಮನು!
ನಾಮರೂಪತೀತನಾತನು; ಪಾಪಪುಣ್ಯಾತೀತನು!

ವಿಶ್ವಮಾಯಾಧೀಶನಾತನು; ಕನಸು ಕಾಣುವನಾತನು!

ಸಾಕ್ಷಿಯಾತನು; ಪ್ರಕೃತಿಜೀವನ ತೆರದಿ ತೋರುವನಾತನು!

ಎಲ್ಲಿ ಮುಕ್ತಿಯ ಹುಡುಕುವೆ?– ಏ-

ಕಿಂತು ಸುಮ್ಮನೆ ದುಡುಕುವೆ?

ಇಹವು ತೋರದು, ಪರವು ತೋರದು;

ಗುಡಿಯೊಳದು ಮೈದೋರದು.

ವೇದ ತೋರದು, ಶಾಸ್ತ್ರ ತೋರದು;

ಮತವು ಮುಕ್ತಿಯ ತೋರದು!

ನಿನ್ನ ಕೈಲಿದೆ ನಿನ್ನ ಬಿಗಿದಿಹ ಕಬ್ಬಿಣದ ಯಮಪಾಶವು;

ಬರಿದೆ ಶೋಕಿಪುದೇಕೆ? ಬಿಡು, ಬಿಡು!

ನಿನಗೆ ನೀನೇ ಮೋಸವು!

ಬೇಡ, ಪಾಶವ ಕಡಿದು ಕೈಬಿಡು! ಹಾಡು ಸಂನ್ಯಾಸಿ-

ಓಂ! ತತ್! ಸತ್! ಓಂ!  ||೬||

‘ಶಾಂತಿ ಸರ್ವರಿಗಿರಲಿ’ ಉಲಿಯೈ, ‘ಜೀವಜಂತುಗಳಾಳಿಗೆ

ಹಿಂಸೆಯಾಗದೆ ಇರಲಿ ಎನ್ನಿಂದೆಲ್ಲ ಸೊಗದಲಿ ಬಾಳುಗೆ!

ಬಾನೊಳಾಡುವ ನೆಲದೊಳೋಡುವ ಸರ್ವರಾತ್ಮನು ನಾನಹೆ;

ನಾಕನರಕಗಳಾಸೆಭಯಗಳನೆಲ್ಲ ಮನದಿಂದ ದೂಡುವೆ!’

ದೇಹ ಬಾಳಲಿ, ಬೀಳಲಿ;-ಅದು

ಕರ್ಮನದಿಯಲಿ ತೇಲಲಿ!

ಕೆಲರು ಹಾರಗಳಿಂದ ಸಿಂಗರಿಸದನು ಪೂಜಿಸಿ ಬಾಗಲಿ!

ಕೆಲರು ಕಾಲಿಂದೊದೆದು ನೂಕಲಿ!

ಹುಡಿಯು ಹುಡಿಯೊಳೆ ಹೋಗಲಿ!

ಎಲ್ಲ ಒಂದಿರಲಾರು ಹೊಗಳುವರಾರು ಹೊಗಳಿಸಿಕೊಂಬರು?

ನಿಂದೆ ನಿಂದಿಪರೆಲ್ಲ ಕೂಡಲು ಯಾರು ನಿಂದೆಯನುಂಬರು?

ಪಾಶಗಳ ಕಡಿ! ಬಿಸುಡು, ಕಿತ್ತಡಿ! ಹಾಡು ಸಂನ್ಯಾಸಿ-

ಓಂ! ತತ್! ಸತ್! ಓಂ!  ||೭||

ಎಲ್ಲಿ ಕಾಮಿನಿಯೆಲ್ಲಿ ಕಾಂಚನದಾಸೆ ನೆಲೆಯಾಗಿರುವುದೋ,

ಸತ್ಯವೆಂಬುವುದಲ್ಲಿ ಸುಳಿಯದು!

ಎಲ್ಲಿ ಕಾಮವು ಇರುವುದೋ,

ಅಲ್ಲಿ ಮುಕ್ತಿಯು ನಾಚಿ ತೋರದು!

ಎಲ್ಲಿ ಸುಳಿವುದೋ ಭೋಗವು

ಅಲ್ಲಿ ತೆರೆಯದು ಮಾಯೆ ಬಾಗಿಲಿನಲ್ಲಿಹುದು ಭವರೋಗವು;

ಎಲ್ಲಿ ನೆಲೆಸದೋ ಚಾಗವೋ,-ದಿಟ

ವಲ್ಲಿ ಸೇರದೋ ಯೋಗವು!

ಗಗನವೇ ಮನೆ! ಹಸುರೇ ಹಾಸಿಗೆ!

ಮನೆಯು ಸಾಲ್ವುದೆ ಚಾಗಿಗೆ?

ಹಸಿಯೋ, ಬಸಿಯೋ? ಬಿದಿಯು

ಕೊಟ್ಟಾಹಾರವನ್ನವು ಯೋಗಿಗೆ!

ಏನು ತಿಂದರೆ, ಏನು ಕುಡಿದರೆ, ಏನು? ಆತ್ಮಗೆ ಕೊರತೆಯೆ?

ಸರ್ವಪಾಪವ ತಿಂದುತೇಗುವ ಗಂಗೆಗೇಂ ಕೊಳೆ ಕೊರತೆಯೆ?

ನೀನು ಮಿಂಚೈ! ನೀನು ಸಿಡಿಲೈ! ಮೊಳಗು ಸನ್ಯಾಸಿ-

ಓಂ! ತತ್! ಸತ್! ಓಂ!  ||೮||

ನಿಜವನರಿತವರೆಲ್ಲೋ ಕೆಲವರು; ನಗುವರುಳಿದವರೆಲ್ಲರೂ

ನಿನ್ನ ಕಂಡರೆ, ಹೇ ಮಹಾತ್ಮನೆ! ಕುರುಡರೇನನು ಬಲ್ಲರು?

ಗಣಿಸದವರನು ಹೋಗು, ಮುಕ್ತನೆ, ನೀನು ಊರಿಂದೂರಿಗೆ

ಸೊಗವ ಬಯಸದೆ, ಅಳಲಿಗಳುಕದೆ! ಕತ್ತಲಲಿ ಸಂಚಾರಿಗೆ

ನಿನ್ನ ಬೆಳಕನು ನೀಡೆಲೈ;- ಸಂ

ಸಾರ ಮಾಯೆಯ ದೂಡೆಲೈ!

ಇಂತು ದಿನದಿನ ಕರ್ಮಶಕ್ತಿಯು ಮುಗಿವವರೆಗೂ ಸಾಗೆಲೈ!

ನಾನು ನೀನುಗಳಳಿದು ಆತ್ಮದೊಳಿಳಿದು ಕಡೆಯೊಳು ಹೋಗೆಲೈ!

ಏಳು ಮೇಲೇಳೇಳು, ಸಾಧುವೆ, ಹಾಡು ಚಾಗಿಯ ಹಾಡನು!

ಹಾಡಿನಿಂದೆಚ್ಚರಿಸು ಮಲಗಿಹ ನಮ್ಮ ಈ ತಾಯ್ನಾಡನು!

ತತ್ವಮಸಿ ಎಂದರಿತು ಹಾಡೈ, ಧೀರ ಸನ್ಯಾಸಿ-

ಓಂ! ತತ್! ಸತ್! ಓಂ!  ||೯||

ಸ್ವಾಮಿ ವಿವೇಕಾನಂದರ ಸನ್ಯಾಸಿ ಗೀತೆಯ ಸಂಪೂರ್ಣ ಅರ್ಥ

ಪಲ್ಲವಿ (ಪ್ರೇರಣೆ)

ಏಳು, ಮೇಲೇಳು ಸಾಧುವೆ, ಹಾಡು ತ್ಯಾಗಿಯ ಹಾಡನು; ಹಾಡಿನಿಂದೆಚ್ಚರಿಸು ಮಲಗಿರುವ ನಮ್ಮ ಈ ತಾಯ್ನಾಡನು! (ಓಂ! ತತ್! ಸತ್! ಓಂ!)

  • ಭಾವಾರ್ಥ: ಎಲೈ ಸನ್ಯಾಸಿಯೇ, ಎಲೈ ಸಾಧಕನೇ, ನೀನು ನಿದ್ದೆಯಿಂದ ಎಚ್ಚರಗೊಳ್ಳು. ತ್ಯಾಗದ ಮಹತ್ವವನ್ನು ಸಾರುವ ಈ ಗೀತೆಯನ್ನು ಹಾಡು. ಈ ಹಾಡಿನ ಮೂಲಕ ಅಜ್ಞಾನದಲ್ಲಿ ಮತ್ತು ಅಂಧಕಾರದಲ್ಲಿ ಮಲಗಿರುವ ನಮ್ಮ ತಾಯ್ನಾಡಿನ ಜನರನ್ನು ಮತ್ತು ಜಗತ್ತನ್ನು ಎಚ್ಚರಗೊಳಿಸು. ಸತ್ಯದ (ಓಂ ತತ್ ಸತ್) ಮಹತ್ವವನ್ನು ಸಾರು.

ಖಂಡ 1: ನಿಜವಾದ ಆನಂದ ಎಲ್ಲಿದೆ?

ದೂರದಡವಿಯೊಳೆಲ್ಲಿ ಲೌಕಿಕ ವಿಷಯ ವಾಸನೆ ಮುಟ್ಟದೋ… ಎಲ್ಲಿ ಆತ್ಮವು ಪಡೆದು ನಲಿವುದೋ ನಿಚ್ಚವಾಗಿಹ ಶಾಂತಿಯ… ಅಲ್ಲಿ ಮೂಡಿದ ಹಾಡನುಲಿಯೈ…

  • ಭಾವಾರ್ಥ: ಎಲ್ಲಿ ಲೌಕಿಕ ಆಸೆಗಳು (ಸಂಸಾರದ ವಾಸನೆ) ಮುಟ್ಟುವುದಿಲ್ಲವೋ, ಎಲ್ಲಿ ನಗರಗಳ ಗಲಿಬಿಲಿ, ಗಲಾಟೆ ತಲುಪುವುದಿಲ್ಲವೋ, ಎಲ್ಲಿ ಕಾಮದ ಮೋಹ ಸುಳಿಯುವುದಿಲ್ಲವೋ, ಕೀರ್ತಿ ಮತ್ತು ಸಂಪತ್ತಿನ (ಕಾಂಚನ) ಆಸೆಯಿಂದ ಹುಟ್ಟುವ ಭ್ರಾಂತಿ ಇರುವುದಿಲ್ಲವೋ… ಅಂದರೆ, ನಿರಂತರವಾದ ಮತ್ತು ಶಾಶ್ವತವಾದ ಶಾಂತಿ ಇರುತ್ತದೆಯೋ, ಯಾವಾಗಲೂ ತೃಪ್ತಿಯ ಝರಿ ಹರಿಯುತ್ತದೆಯೋ, ಅಂತಹ ಆನಂದಮಯವಾದ ಅನುಭವದಿಂದ ಮೂಡಿದ ಹಾಡನ್ನು ಹಾಡು.

ಖಂಡ 2: ಬಂಧನಗಳನ್ನು ಮುರಿದು ಹಾಕು

ಕುಟ್ಟಿ ಪುಡಿ ಪುಡಿ ಮಾಡು ಮಾಯೆಯು ಕಟ್ಟಿಬಿಗಿದಿಹ ಹಗ್ಗವ; ಕಿತ್ತು ಬಿಸುಡೈ ಹೊಳೆವ ಹೊನ್ನಿನ ಹೆಣ್ಣು ಮಣ್ಣಿನ ಕಗ್ಗವ! ದ್ವಂದ್ವ ರಾಜ್ಯದ ಧೂರ್ತಚೋರರು! ಬಿಟ್ಟು ಕಳೆ, ಕಳೆಯವರನು!

  • ಭಾವಾರ್ಥ: ಈ ಜಗತ್ತಿನಲ್ಲಿ ಮಾಯೆ (ಭ್ರಮೆ) ನಮ್ಮನ್ನು ಬಂಧಿಸಿರುವ ಹಗ್ಗಗಳನ್ನು ಪುಡಿಪುಡಿ ಮಾಡು. ಸಂಪತ್ತು, ಹೆಣ್ಣು ಮತ್ತು ಭೂಮಿಯ (ಮಣ್ಣಿನ) ಮೇಲಿನ ಆಸೆಯಿಂದ ಹುಟ್ಟುವ ಬಂಧನಗಳನ್ನು ಕಿತ್ತೆಸೆ. ನೀನು ಈ ಬಂಧನಗಳಿಗೆ ಅಂಟಿಕೊಂಡರೆ, ನೀನು ಯಾವತ್ತಿದ್ದರೂ ಗುಲಾಮನೇ. ಪಾಪ-ಪುಣ್ಯ ಮತ್ತು ದ್ವೇಷ-ಪ್ರೀತಿ ಎಂಬ ದ್ವಂದ್ವಗಳು ನಮ್ಮ ಮನಸ್ಸಿನ ಶಾಂತಿಯನ್ನು ಕದಿಯುವ ಧೂರ್ತ ಕಳ್ಳರು. ಇವುಗಳಿಂದ ಮೋಹಗೊಳ್ಳದೆ, ವಿರಕ್ತನಾಗಿ ಅವುಗಳನ್ನು ದೂರ ತಳ್ಳಿ, ಮುಕ್ತಿಯ ಗೀತೆಯನ್ನು ಹಾಡು.

ಖಂಡ 3: ಮುಂದುವರಿದು ಗುರಿ ತಲುಪು

ಕತ್ತಲಳಿಯಲಿ; ಮಬ್ಬುಕವಿಸುವ ಭವದ ತೃಷ್ಣೆಯು ಬತ್ತಲಿ; ಬಾಳ ಮೋಹವು ಮರುಮರೀಚಿಕೆ; ಮಾಯೆ ಕೆತ್ತಿದ ಪುತ್ತಳಿ… ಗುರಿಯು ದೊರಕುವವರೆಗೆ ನಡೆ, ನಡೆ; ನೋಡದಿರು ನೀ ಹಿಂದಕೆ.

  • ಭಾವಾರ್ಥ: ಅಜ್ಞಾನದ ಕತ್ತಲು ಮತ್ತು ಸಂಸಾರದ ಬಗೆಗಿನ ತೀವ್ರವಾದ ಆಸೆ (ತೃಷ್ಣೆ) ದೂರವಾಗಲಿ. ಜೀವನದ ಮೇಲಿನ ಈ ಮೋಹವು ಕೇವಲ ಮರುಭೂಮಿಯ ಮರೀಚಿಕೆಯಂತೆ ಸುಳ್ಳು. ನಾವು ದೇಹಕ್ಕೆ ಅಂಟಿಕೊಂಡಿದ್ದರಿಂದಲೇ ಜನ್ಮ-ಮರಣದ ಚಕ್ರದಲ್ಲಿ ಸುತ್ತುತ್ತಿದ್ದೇವೆ. ಈ ಸಂಸಾರದ ಮೋಹವನ್ನು ಯಾರು ಜಯಿಸುವನೋ, ಅವನೇ ಎಲ್ಲವನ್ನೂ ಜಯಿಸಿದ ಮುಕ್ತನು ಆಗುತ್ತಾನೆ. ಆದ್ದರಿಂದ, ಹಿಂಜರಿಯದೆ ಗುರಿ ತಲುಪುವವರೆಗೆ ಮುನ್ನುಗ್ಗು; ಹಿಂದೆ ತಿರುಗಿ ನೋಡಬೇಡ.

ಖಂಡ 4: ನೀನು ನಾಮರೂಪಾತೀತ

ಬೆಳೆಯ ಕೊಯ್ವನು ಬಿತ್ತಿದಾತನು; ಪಾಪ ಪಾಪಕೆ ಕಾರಣ… ಆದೊಡೇನಂತಾತ್ಮವೆಂಬುದು ನಾಮರೂಪತೀತವು; ಮುಕ್ತಿಬಂಧಗಳಿಲ್ಲದಾತ್ಮವು ಸರ್ವನಿಯಮಾತೀತವು! ತತ್ವಮಸಿಯೆಂದರಿತು…

  • ಭಾವಾರ್ಥ: “ಬಿತ್ತಿದ್ದನ್ನು ಕೊಯ್ಯಬೇಕು” (ಕರ್ಮಫಲ) ಎಂದು ಪಂಡಿತರು ಹೇಳುತ್ತಾರೆ. ಆದರೆ, ಆತ್ಮವು (ನೀನು) ನಾಮ ಮತ್ತು ರೂಪಗಳಿಂದ ಅಂದರೆ ಯಾವುದೇ ಹೆಸರು ಮತ್ತು ಆಕಾರದಿಂದ ಅತೀತವಾಗಿದೆ. ಅದು ಮುಕ್ತಿ ಮತ್ತು ಬಂಧನಗಳಿಗಿಂತ ಮೇಲಿದ್ದು, ಎಲ್ಲಾ ನಿಯಮಗಳಿಗೂ ಮೀರಿದೆ. “ತತ್ತ್ವಮಸಿ” (ನೀನೇ ಅದು) ಎಂಬ ಮಹಾವಾಕ್ಯದ ಸತ್ಯವನ್ನು ಅರಿತು, ನಿನ್ನ ಆತ್ಮದ ಶ್ರೇಷ್ಠತೆಯನ್ನು ಜಗತ್ತಿಗೆ ಸಾರು.

ಖಂಡ 5: ಎಲ್ಲವೂ ಒಂದೇ ಆತ್ಮ

ತಂದೆ ತಾಯಿಯು ಸತಿಯು ಮಕ್ಕಳು ಗೆಳೆಯರೆಂಬುವರರಿಯರು… ಲಿಂಗವರಿಯದ ಅತ್ಮವಾರಿಗೆ ಮಗುವು? …ಭೇದವನು ತೊರೆದೊಂದೆಯೆಂಬುದನರಿಯೆ ಮುಕ್ತಿಗೆ ಸೇತುವು.

  • ಭಾವಾರ್ಥ: ಈ ಸಂಸಾರದಲ್ಲಿ ನಮ್ಮವರೆಂದು ನಾವು ತಿಳಿಯುವ ತಂದೆ-ತಾಯಿ, ಹೆಂಡತಿ-ಮಕ್ಕಳು, ಗೆಳೆಯರು ಇವರೆಲ್ಲರೂ ಕೇವಲ ಕನಸಿನಂತೆ ತಾತ್ಕಾಲಿಕ. ಲಿಂಗ, ಸಂಬಂಧ ಎಂಬ ಭೇದವಿಲ್ಲದ ಆತ್ಮಕ್ಕೆ ಯಾರ ಮಗ, ಯಾರ ತಾತ? ಆತ್ಮವು ಎಲ್ಲೆಡೆಯೂ ಇದೆ ಮತ್ತು ಒಂದೇ ಆಗಿದೆ. “ಭೇದ” ಎಂಬ ತೋರಿಕೆಯೇ ನಮ್ಮ ನಾಶಕ್ಕೆ ಕಾರಣ. ಈ ಭೇದಗಳನ್ನು ತೊರೆದು ಎಲ್ಲವೂ ಒಂದೇ ಎಂದು ಅರಿಯುವುದೇ ಮುಕ್ತಿಗೆ ದಾರಿ. ಈ ಸತ್ಯವನ್ನು ಧೈರ್ಯದಿಂದ ಎಲ್ಲರಿಗೂ ತಿಳಿಸು.

ಖಂಡ 6: ನಿನ್ನಲ್ಲಿಯೇ ಮುಕ್ತಿ ಇದೆ

ಇರುವುದೊಂದೇ! ನಿತ್ಯಮುಕ್ತನು, ಸರ್ವಜ್ಞಾನಿಯು ಆತ್ಮನು!… ಎಲ್ಲಿ ಮುಕ್ತಿಯ ಹುಡುಕುವೆ?– ಏಕಿಂತು ಸುಮ್ಮನೆ ದುಡುಕುವೆ?… ನಿನಗೆ ನೀನೇ ಮೋಸವು!

  • ಭಾವಾರ್ಥ: ಈ ಜಗತ್ತಿನಲ್ಲಿ ಇರುವುದು ಒಂದೇ ಆತ್ಮ. ಅದು ನಿತ್ಯಮುಕ್ತ, ಸರ್ವಜ್ಞಾನಿ, ನಾಮರೂಪಾತೀತ, ಮತ್ತು ಪಾಪ-ಪುಣ್ಯಕ್ಕೆ ಮೀರಿದ್ದು. ಈ ಆತ್ಮವೇ ಮಾಯೆಗೆ ಒಡೆಯನಾಗಿ ಕನಸು ಕಾಣುತ್ತಿರುವವನು. ನೀನು ಈ ಮುಕ್ತಿಯನ್ನು ದೇವಸ್ಥಾನದಲ್ಲಿ, ವೇದ-ಶಾಸ್ತ್ರಗಳಲ್ಲಿ ಅಥವಾ ಮತಗಳಲ್ಲಿ ಹುಡುಕುವುದೇಕೆ? ನಿನ್ನನ್ನು ನೀನು ಬಂಧಿಸಿರುವ ಯಮಪಾಶ (ಬಂಧನ) ನಿನ್ನ ಕೈಯಲ್ಲೇ ಇದೆ. ಶೋಕಿಸುವುದನ್ನು ಬಿಟ್ಟುಬಿಡು, ಬೇಡವೆಂದು ಅದನ್ನು ಕತ್ತರಿಸಿ ಎಸೆ. ನಿನ್ನ ಆತ್ಮವೇ ಮುಕ್ತಿ!

ಖಂಡ 7: ದ್ವಂದ್ವಾತೀತನಾಗಿ ಬಾಳು

‘ಶಾಂತಿ ಸರ್ವರಿಗಿರಲಿ’ ಉಲಿಯೈ, ‘ಜೀವಜಂತುಗಳಾಳಿಗೆ ಹಿಂಸೆಯಾಗದೆ ಇರಲಿ… ಎಲ್ಲ ಒಂದಿರಲಾರು ಹೊಗಳುವರಾರು ಹೊಗಳಿಸಿಕೊಂಬರು? …ಪಾಶಗಳ ಕಡಿ! ಬಿಸುಡು, ಕಿತ್ತಡಿ!

  • ಭಾವಾರ್ಥ: “ಎಲ್ಲರಿಗೂ ಶಾಂತಿ ಇರಲಿ. ನನ್ನಿಂದ ಯಾರಿಗೂ ಹಿಂಸೆಯಾಗದಿರಲಿ” ಎಂದು ಘೋಷಿಸು. ಆಕಾಶದಲ್ಲಿ ಮತ್ತು ಭೂಮಿಯ ಮೇಲೆ ಇರುವ ಎಲ್ಲ ಜೀವಿಗಳ ಆತ್ಮವು ನಾನೇ ಎಂದು ತಿಳಿ. ಸ್ವರ್ಗ ಮತ್ತು ನರಕದ ಆಸೆ-ಭಯಗಳನ್ನು ಮನಸ್ಸಿನಿಂದ ದೂರ ಮಾಡು. ದೇಹವು ಕರ್ಮದ ನದಿಯಲ್ಲಿ ತೇಲಲಿ; ಕೆಲವರು ಅದನ್ನು ಹೂವಿನಿಂದ ಪೂಜಿಸಲಿ, ಕೆಲವರು ಕಾಲಿನಿಂದ ಒದ್ದು ನೂಕಲಿ. ಎಲ್ಲವೂ ಒಂದೇ ಆದ ಮೇಲೆ, ಯಾರು ಯಾರನ್ನು ಹೊಗಳುವರು ಅಥವಾ ನಿಂದಿಸುವರು? ಎಲ್ಲ ಪಾಶಗಳನ್ನು ಕತ್ತರಿಸಿ ಎಸೆ.

ಖಂಡ 8: ಯೋಗಿಯ ನಿಜವಾದ ತ್ಯಾಗ

ಎಲ್ಲಿ ಕಾಮಿನಿಯೆಲ್ಲಿ ಕಾಂಚನದಾಸೆ ನೆಲೆಯಾಗಿರುವುದೋ, ಸತ್ಯವೆಂಬುವುದಲ್ಲಿ ಸುಳಿಯದು!… ಗಗನವೇ ಮನೆ! ಹಸುರೇ ಹಾಸಿಗೆ! ಮನೆಯು ಸಾಲ್ವುದೆ ತ್ಯಾಗಿಗೆ?

  • ಭಾವಾರ್ಥ: ಎಲ್ಲಿ ಸಂಪತ್ತು (ಕಾಂಚನ) ಮತ್ತು ಕಾಮದ ಆಸೆ ನೆಲೆಸಿರುತ್ತದೆಯೋ, ಅಲ್ಲಿ ಸತ್ಯವು ಸುಳಿಯುವುದಿಲ್ಲ. ಭೋಗಾಸಕ್ತಿ ಇರುವಲ್ಲಿ ಮುಕ್ತಿಯು ನಾಚುತ್ತದೆ. ನಿಜವಾದ ತ್ಯಾಗಿಗೆ ಆಕಾಶವೇ ಮನೆ ಮತ್ತು ಹಸಿರು ಭೂಮಿಯೇ ಹಾಸಿಗೆ. ಅವನಿಗೆ ಆಹಾರ, ಪಾನೀಯಗಳ ಚಿಂತೆ ಇಲ್ಲ. ಅವನು ಏನೇ ಸೇವಿಸಿದರೂ ಆತ್ಮಗೆ ಕೊರತೆ ಇಲ್ಲ. ಎಲ್ಲಾ ಪಾಪಗಳನ್ನು ಸ್ವೀಕರಿಸುವ ಗಂಗೆಗೆ ಕೊಳೆಯಿಲ್ಲದಂತೆ, ಯೋಗಿಗೆ ಈ ಲೌಕಿಕ ಚಿಂತೆಗಳಿಲ್ಲ. ನೀನು ಮಿಂಚು ಮತ್ತು ಸಿಡಿಲು ಇದ್ದಂತೆ! ಸತ್ಯದ ಶಕ್ತಿಯನ್ನು ಮೊಳಗಿಸು!

ಖಂಡ 9: ಜಗತ್ತಿಗೆ ಬೆಳಕಾಗು

ನಿಜವನರಿತವರೆಲ್ಲೋ ಕೆಲವರು; ನಗುವರುಳಿದವರೆಲ್ಲರೂ ನಿನ್ನ ಕಂಡರೆ… ಕತ್ತಲಲಿ ಸಂಚಾರಿಗೆ ನಿನ್ನ ಬೆಳಕನು ನೀಡೆಲೈ… ನಾನು ನೀನುಗಳಳಿದು ಆತ್ಮದೊಳಿಳಿದು ಕಡೆಯೊಳು ಹೋಗೆಲೈ!

  • ಭಾವಾರ್ಥ: ಸತ್ಯವನ್ನು ಅರಿತವರು ಕೆಲವೇ ಜನ. ಉಳಿದವರೆಲ್ಲರೂ ಕುರುಡರಂತೆ ನಿನ್ನನ್ನು ಕಂಡರೆ ನಗಬಹುದು. ಆದರೆ ಅವರನ್ನು ಲೆಕ್ಕಿಸಬೇಡ. ನೀನು ಊರಿಂದೂರಿಗೆ ಸುತ್ತು, ಯಾವುದೇ ಸುಖವನ್ನು ಬಯಸದೆ, ದುಃಖಕ್ಕೆ ಅಳದೆ, ಅಜ್ಞಾನದ ಕತ್ತಲೆಯಲ್ಲಿರುವವರಿಗೆ ನಿನ್ನ ಬೆಳಕನ್ನು ನೀಡು. ಹೀಗೆ ದಿನೇ ದಿನೇ ಕರ್ಮದ ಶಕ್ತಿಯು ಮುಗಿಯುವವರೆಗೆ ಸಾಗು. ಕೊನೆಗೆ, “ನಾನು” ಮತ್ತು “ನೀನು” ಎಂಬ ಭೇದಗಳು ಅಳಿದುಹೋಗಿ, ನೀನು ಪರಮಾತ್ಮನೊಂದಿಗೆ ಒಂದಾಗು.

“ಇಂದಿನ ಪ್ರಮುಖ ಸರ್ಕಾರಿ ಯೋಜನೆಗಳು + ಉದ್ಯೋಗ ಸುದ್ದಿ + ಕ್ರೀಡೆ + ಸಿನಿಮಾ – ಮೊದಲು ತಿಳಿಯಿರಿ!”

WhatsApp Group
Join Now
WhatsApp Channel
Join Now
Safe Official Link

Akbar Birbal All News Astrology Books Culture Film Govt Scheme Health Information Inspiration Job News Mobiles News Pravasa Kathana Social Technology

Leave a Comment

Comments

No comments yet. Why don’t you start the discussion?

    Leave a Reply