ಅಂಜಿ ಓಡಿದರು
ಹಿಂದಿನ ಕಾಲದಲ್ಲಿ ರಾಜರು ಕೇವಲ ಐಷಾರಾಮಿಗೆ ಬಿದ್ದು ಸುಖ ಲೋಲಿಪ್ತರಾಗಲಿಲ್ಲ. ಪ್ರಜೆಗಳ ಸುಖ-ದುಃಖದ ಕಡೆಗೆ ಅವರು ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿ ಲಕ್ಷ್ಯಗೊಡುತ್ತಿದ್ದರು. ಪ್ರಜಾ ಸಂರಕ್ಷಕ ದಳಗಳನ್ನು ಏರ್ಪಡಿಸಿದ್ದರು. ಗುಪ್ತ ಪೊಲೀಸ ದಳಗಳೂ ಇದ್ದವು. ಇವುಗಳಲ್ಲದೇ ಸ್ವತಃ ರಾಜಪ್ರಧಾನರೆಲ್ಲರೂ ಹಳ್ಳಿಯವರಂತೆ ವೇಷ ಹಾಕಿಕೊಂಡು ಸಾಮಾನ್ಯ ಜನರಲ್ಲಿ ಬೆರೆತು ಅವರ ಕಷ್ಟ-ನಷ್ಟಗಳನ್ನು ಕೇಳಿ ಅವರನ್ನು ಉದ್ಧರಿಸಲು ಪ್ರಯತ್ನಿಸುತ್ತಿದ್ದರು.
ಅಕಬರ-ಬೀರಬಲ್ಲರು ಇಂಥ ಪೋಷಾಕನ್ನು ಧರಿಸಿ ವೇಷ ಬದಲಿಸಿ ಒಂದು ದಿನ ಬೀದಿಯಲ್ಲಿ ರಾತ್ರಿ ಹೊರಟಾಗ ಓರ್ವ ಸ್ತ್ರೀ ವ್ಯಕ್ತಿಯು ಎದುರು ಬಂದಿತು.
ಇಂಥ ನಡುರಾತ್ರಿಯಲ್ಲಿ ಈ ಸ್ತ್ರೀ ವ್ಯಕ್ತಿ ಓರ್ವಳೇ ಹೊರಟಿದ್ದು ಇವರಿಬ್ಬಗೂ ಬಹಳ ಆಶ್ಚರ್ಯವನ್ನುಂಟು ಮಾಡಿತು. ಸನಿಹಕ್ಕೆ ಹೋಗಿ ನೋಡಿದರು. ತಾರುಣ್ಯದಿಂದ ತುಳುಕುವ ಯುವತಿ ಸರ್ವಾಲಂಕೃತಳಾಗಿ ಹೊರಟಿದ್ದಾಳೆ. ಬೀರಬಲ್ಲನು ಕೇಳಿದನು.
“ತಂಗೀ ನೀನು ಯಾರು? ಇಂಥ ರಾತ್ರಿಯಲ್ಲಿ ಎಲ್ಲಿಗೆ ಹೊರಟೆ?”
“ನಾನು ಬ್ರಹ್ಮಪುತ್ರ ಶೆಟ್ಟಿಯು ಮಗಳು ಗಂಗಾ, ಬೇಸಿಗೆಯಾದುದರಿಂದ ತಂದೆಯು ಮನೆಯಿಂದ ತಳ್ಳಿಬಿಟ್ಟನು.”
ಬೀರಬಲ್ಲನಿಗೆ ಏಕೋ ಒಂದು ವಾಕ್ಯದಲ್ಲಿ ವಿಶೇಷವಿರಬೇಕೆಂದೂ ಇವಳು ಸಾಮಾನ್ಯ ಸ್ತ್ರೀಯಲ್ಲವೆಂದೂ ಅನಿಸಿತು.
“ನಿನ್ನ ಹೆಸರೇನವ್ವ?”
“ಗಂಗಾ, ಇಷ್ಟೂ ತಿಳಿಯದ ಅಜ್ಞಾನಿಯಾದ ನೀನಾರು?”
“ನಿಜ ತಿಳಿಯಿತು. ನಿನ್ನ ತಾಯಿಯ ಹೆಸರು ಯಮುನಾ ಅಲ್ಲವೇ?”
“ಹೌದು, ಈಗ ನೀನು ಜಾಣನಾದೆ.”
“ನಿನ್ನ ಅಕ್ಕ-ತಂಗಿಯರು?”
“ಇದ್ದಾರೆ ನನಗೆ ಐದು ಜನ ಅಕ್ಕ-ತಂಗಿಯರಿದ್ದಾರೆ. ಅವರ ಹೆಸರು ಸರಸ್ವತಿ, ನರ್ಮದಾ, ಕೃಷ್ಣಾ, ಕಾವೇರಿ.”
“ಓಹೋ ಹೀಗೇನು, ಎಲ್ಲವೂ ಅಡ್ಡವಾಯಿತು. ನೀನು ಹೊರಟಿದ್ದೆಲ್ಲಿ?'”
“ಸಾಗರನಾಥನ ಮನೆಗೆ ಸರಿ ಹಿಂದಕ್ಕೆ ಸಾಕು ನಿನ್ನ ಪ್ರಶ್ನೆ.”
“ಅಬ್ಬ ಖುದಾವಂದ ನಾವು ಇಲ್ಲಿ ನಿಲ್ಲುವದು ಒಳ್ಳೇದಲ್ಲ. ಇವಳು ಸಾಗರ ನಾಥನ ಮನೆಗೆ ಹೋಗುವಾಗ ನಮ್ಮನ್ನು ಕೊಚ್ಚಿಕೊಂಡು ಹೋಗಿ ಬಿಟ್ಟಾಳು?
ದಾಟಿ ಬರಲಿಕ್ಕೆ ದೋಣಿಗಳು ಸಹ ಇಲ್ಲ ಬನ್ನಿ ಓಡಿ ಹೋಗೋಣ”ಎಂದನು.
ಈರ್ವರೂ ಪಲಾಯನ ಹೇಳಿದರು.
ಮುಂದಿನ ಭಾಗ ಓದಿ…